Anjali Murder: ಮೃತದೇಹ ಎತ್ತದಂತೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ: ಗೂಂಡಾ ಸರ್ಕಾರ ಎಂದು ಘೋಷಣೆ

ಹುಬ್ಬಳ್ಳಿ, ಮೇ 15: ಹುಬ್ಬಳ್ಳಿಯಲ್ಲಿ ನೇಹಾ ಹಿರಮೇಠ ಹತ್ಯೆ ನಡೆದು ಕೆಲವು ವಾರಗಳ ಬೆನ್ನಲ್ಲೆ ಯುವತಿ ಅಂಜಲಿಯ ಹತ್ಯೆ ನಡೆದಿದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಇಂದು ಕಿಮ್ಸ್ ಆಸ್ಪತ್ರೆ ಮುಂದೆ ಯುವತಿ ಮೃತದೇಹ ಅಂತ್ಯಕ್ರಿಯೆಗೆ ರವಾನಿಸಿದಂತೆ ತಡೆ ಹಿಡಿದ ಘಟನೆ ನಡೆದಿದೆ.

ಹೌದು, ಇಂದು ಬೆಳ್ಳಂಬೆಳಗ್ಗೆ ಇಲ್ಲಿನ ವೀರಾಪೂರ ಓಣಿಯಲ್ಲಿರುವ ಅಂಜಲಿ ಮನೆಗೆ ನುಗ್ಗಿದ ಆರೋಪಿ ಗಿರೀಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪ್ರೀತಿ ನಿರಾಕರಿಸಿದ್ದಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಘಟನೆಯಿಂದ ಆಕ್ರೋಶಗೊಂಡಿರುವ ಕುಟುಂಬಸ್ಥರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಗಳು ಅಂಜಲಿ ಮನೆಗೆ ಬರುವವರೆಗೂ ಮೃತ ದೇಹ ಎತ್ತಲು ಬಿಡುವುದಿಲ್ಲ ಎಂದು ಕಿಮ್ಸ್ ಆಸ್ಪತ್ರೆ ಹಾಗೂ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮೃತದೇಹದ ಆಂಬ್ಯುಲೆನ್ಸ್‌ಗೆ ತಡೆ

ಅಂಜಲಿ ಮೃತದೇಹ ಅಂತಿಮ ಆಸ್ಪತ್ರೆ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ಆಂಬ್ಯುಲೆನ್ಸ್ ನಲ್ಲಿ ಅಂತ್ಯಕ್ರಿಯೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಪ್ರತಿಭಟನಾಕಾರರು ಆಂಬ್ಯುಲೆನ್ಸ್ ಮುಂದೆ ಸಾಗದಂತೆ ತಡೆ ನೀಡಿದರು. ಇನ್ನೂ ಎಷ್ಟು ಹೆಣ್ಣುಮಕ್ಕಳ ಜೀವ ಬಲಿಯಾಗಬೇಕು ಎಂದೆಲ್ಲ ಕಣ್ಣೀರಿಟ್ಟರು. ಈ ವೇಳೆ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ಸಹ ಧರಣಿಯಲ್ಲಿದ್ದರು.

ಅಂಜಲಿ ಕೊಂದವನನ್ನು ಗಲ್ಲಿಗೇರಿಸಲು ಆಗ್ರಹ

ಹಂತಕನ್ನೂ ಗಲ್ಲಿಗೇರಿಸುವ ಮೂಲಕ ಯುವತಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಗುಂಡಾ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಇದೊಂದು ಹೀನ ಕೃತ್ಯ ಎಂದೆಲ್ಲ ಧಿಕ್ಕಾರ ಕೂಗಿದರು. ಸರ್ಕಾರ ಆಡಳಿತ ವಿರುದ್ಧ ಕಿಡಿ ಕಾರಿದರು. ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರ ಮಧ್ಯೆ ವಾಗ್ವಾದ, ತಳ್ಳಾಟ ನೂಕಾಟ ನಡೆಯಿತು. ನಂತರ ಪೊಲೀಸರ ಆಂಬ್ಯುಲೆನ್ಸ್ ಸಾಗಲು ಅನುವು ಮಾಡಿದರು.

ರಾಜ್ಯ ಗೃಹ ಇಲಾಖೆ ವರ್ಗಾವಣೆಯಲ್ಲಿ ಬ್ಯೂಸಿ

ಕಿಮ್ಸ್‌ನ ಶವಾಗಾರಕ್ಕೆ ಭೇಟಿ ಯುವತಿ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ನೇಹಾ ಹಿರೇಮಠ ಕೊಲೆಯಾದ ಕೆಲವೇ ವಾರಗಳಲ್ಲಿ ಯುವತಿ ಅಂಜಲಿ ಕೊಲೆಯಾಗಿದೆ. ಗೃಹ ಇಲಾಖೆ ವರ್ಗಾವಣೆ ವಿಚಾರದಲ್ಲಿ ಬ್ಯೂಸಿಯಾಗಿದೆ. ಪೊಲೀಸರ ವೈಫಲ್ಯವೇ ಅಂಜಲಿ ಕೊಲೆಗೆ ಕಾರಣ ಎಂದು ಅವರು ದೂರಿದರು.

Leave a Reply

Your email address will not be published. Required fields are marked *